top of page

ಬಸ್ ಓಡಾಟ ಪ್ರಾರಂಭ. ಗ್ರಾಮೀಣ ಭಾಗಕ್ಕೆ ಮುಂದಿನ ದಿನಗಳಲ್ಲಿ ಬಸ್ ಸಂಚಾರ.


ಯಲ್ಲಾಪುರ.

ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿದ್ದ ಸಾರಿಗೆ ವ್ಯವಸ್ಥೆ, ಬಸ್‍ಗಳ ಸಂಚಾರ ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಪುನರಾರಂಭಗೊಂಡಿದೆ.ಬಸ್ ಓಡಾಟ,ಪ್ರಯಾಣಿಕರ ಕಲರವ ಇಲ್ಲದೇ ಕಳಾಹೀನವಾಗಿದ್ದ ಬಸ್ ನಿಲ್ಧಾಣಗಳುಲವಲವಿಕೆ, ಚೈತನ್ಯ ಕಂಡಿವೆ.


ಸರಕಾರದ ಮಾರ್ಗಸೂಚಿಯಂತೆ ಸೋಮವಾರದಿಂದ ಕೆಲ ಜಿಲ್ಲೆಯಗಳನ್ನು ಹೊರತುಪಡಿಸಿ, ಉಳಿದೆಡೆ ಬಸ್ ಸಂಚಾರ ಪ್ರಾರಂಭವಾಗಿದೆ. ಸದ್ಯಕ್ಕೆ ಗ್ರಾಮೀಣ ಭಾಗಕ್ಕೆ ಬಸ್ ಓಡಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸರಕಾರದ ಆದೇಶದ ಮೇರೆಗೆ ಗ್ರಾಮೀಣ ಭಾಗಗಳಿಗೆ ಹಾಗೂ ಉಳಿದ ಕಡೆಗಳಿಗೆ ಬಸ್ ಓಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಾ.ಕ.ರಾ.ರ.ಸಾ.ನಿಗಮ ಹುಬ್ಬಳ್ಳಿ ಅಧ್ಯಕ್ಷ ವಿ.ಎಸ್.ಪಾಟೀಲ್ ಇ-ಯಲ್ಲಾಪುರ ಪ್ರತಿನಿಧಿಗೆ ತಿಳಿಸಿದ್ದಾರೆ.

ಸರಕಾರ ಪ್ರಕಟಿಸಿದ ನಿಯಮಾವಳಿಯ ಅನುಸಾರ ವಿವಿಧ ಮಾರ್ಗಗಳಲ್ಲಿ ಬಸ್ ಓಡಿಸಲು ಇಲಾಖೆಯು ಕ್ರಮ ಕೈಗೊಂಡಿದ್ದು. ಚಾಲಕರು ಹಾಗೂ ನಿರ್ವಾಹಕರು ಹಾಜರಾಗಿದ್ದಾರೆ. ಸೋಮವಾರ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಮುಂಚೆ ನಿತ್ಯ ಓಡಾಟ ನಡೆಸುತ್ತಿದ್ದ ಬಸ್‍ಗಳ ಪೈಕಿ ಶೆ.25ರಷ್ಟು ಅಂದರೆ 100 ಬಸ್‍ಗಳು ಮಾತ್ರ ಮೊದಲ ಹಂತದಲ್ಲಿ ರಸ್ತೆಗಿಳಿದಿವೆ. ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಗೆ ಅನುಸಾರವಾಗಿ ಬಸ್ಸುಗಳ ಓಡಾಟ ಸಂಖ್ಯೆ ಹೆಚ್ಚಾಗಲಿದೆ. ಸದ್ಯಕ್ಕೆ ಗ್ರಾಮೀಣ ಭಾಗಕ್ಕೆ ಬಸ್ ಓಡಿಸಲಾಗುವುದಿಲ್ಲ. ಸಾಕಷ್ಟು ಪ್ರಯಾಣಿಕರ ಸಂಖ್ಯೆ ಇದ್ದರೆ ಮುಂದಿನ ದಿನಗಳಲ್ಲಿ ಹಳ್ಳಿಗಳಿಗೂ ಬಸ್ ಬಿಡಲಾಗುವುದು ಎಂದು ಕ.ರಾ.ರ.ಸಾ.ಸಂ. ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ರಾಜಕುಮಾರ್ ಇ-ಯಲ್ಲಾಪುರ ಪ್ರತಿನಿಧಿಗೆ ತಿಳಿಸಿದ್ದಾರೆ.

ಸುವ್ಯವಸ್ಥಿತ ಓಡಾಟಕ್ಕಾಗಿ ಸಾರಿಗೆ ಇಲಾಖೆಯ ವತಿಯಿಂದ ಸರಕಾರದ ಸೂಚನೆಯಂತೆ ಎಲ್ಲ ಮುಂಜಾಕ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಸಿಟಿವಿಟಿ ದರ ಕಡಿಮೆ ಇರುವ, ಅನ್‍ಲಾಕ್ ಜಾರಿಯಾದ ಪಕ್ಕದ ಹಾವೇರಿ ಹಾಗೂ ಬೆಳಗಾಂ ಮಾರ್ಗದಲ್ಲಿಯೂ ಜಿಲ್ಲೆಯಿಂದ ಬಸ್ ಸಂಚಾರ ಆರಂಭವಾಗಿದೆ. ಈಗಾಗಲೇ ಎಲ್ಲ ತಾಲೂಕುಗಳ ಕೇಂದ್ರದಲ್ಲಿರುವ ಬಸ್ ನಿಲ್ಧಾಣಗಳ ಆವಾರವನ್ನು ತೊಳೆದು ಸ್ವಚ್ಛಗೊಳಿಸಲಾಗಿದೆ. ಬಸ್‍ಗಳನ್ನೂ ಸ್ವಚ್ಛಗೊಳಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಕೋವಿಡ್ ವ್ಯಾಕ್ಸಿನೇಶನ್ ಮಾಡಲಾಗಿದೆ. ಕೋವಿಡ್ ನೆಗೆಟಿವ್ ರಿಪೋರ್ಟ ಕಡ್ಡಾಯಗೊಳಿಸಲಾಗಿದೆ. ಬಸ್ಸಿನ ಶೆ.50ರಷ್ಟು ಸೀಟುಗಳಲ್ಲಿ ಮಾತ್ರ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಮಾರ್ಗಕ್ಕೆ ಹೋಗಿ ಬಂದ ನಂತರ ಬಸ್‍ಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಇ-ಯಲ್ಲಾಪುರ ಪ್ರತಿನಿಧಿಗೆ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೇವಲ ತಾಲೂಕುಗಳ ನಡುವೆ ಹಾಗೂ ಆಯ್ದ ಜಿಲ್ಲೆಗಳ ನಡುವೆ ಮಾತ್ರ ಬಸ್‍ಗಳು ಸಂಚರಿಸಲಿವೆ. ಆದರೆ ಗ್ರಾಮೀಣ ಭಾಗಕ್ಕೆ ಇಂದಿನಿಂದಲೇ ಬಸ್ ಓಡಿಸಲು ಇಲಾಖೆ ಸಿದ್ಧವಿಲ್ಲದಿರುವುದು ಗ್ರಾಮೀಣ ಭಾಗದ ಜನರಿಗೆ ನಿರಾಸೆ ಮೂಡಿಸಿದೆ. ಬಸ್ ಬಿಡಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮೀಣ ಭಾಗದ ಜನರ ಆಗ್ರಹವಾಗಿದೆ.

ಪ್ರಯಾಣಿಕರು ಹೆಚ್ಚಿದ್ದು, ಬೇಡಿಕೆ ಬಂದರೆ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಓಡಿಸಲಾಗುವುದು ಎಂದು ಯಲ್ಲಾಪುರ ಘಟಕದ ಟ್ರಾಪಿಕ್ ಇನ್ಸ್ಪೆಕ್ಟರ್ ಮಹೇಶ ಜೋಗಳೇಕರ್ ತಿಳಿಸಿದ್ದಾರೆ,



ಬಸ್ ನಿಲ್ಧಾಣದ ಆವಾರದಲ್ಲಿರುವ ಅಂಗಡಿ-ಮುಂಗಟ್ಟುಗಳು ಓಪನ್ ಆಗಿವೆ.


* ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಬಸ್ ಓಡಿಸಲು ಇಲಾಖೆ ಸಿದ್ಧವಾಗಿದೆ. ನಿಯಮಾವಳಿಯನ್ನು ಅನುಸರಿಸಿ, ಮುಂಜಾಗ್ರತಾ ಕ್ರಮದೊಂದಿಗೆ ಪ್ರಯಾಣಿಕರು ಪ್ರಯಾಣಿಸಬೇಕು. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 100 ಬಸ್‍ಗಳು ರಸ್ತೆಗೆ ಇಳಿಯಲಿದ್ದು, ಬೇಡಿಕೆ ಹೆಚ್ಚಾದಂತೆ ಇನ್ನಷ್ಟು ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ===ಎಂ.ರಾಜಕುಮಾರ್. ವಿಭಾಗೀಯ ನಿಯಂತ್ರಣಾಧಿಕಾರಿ. ಶಿರಸಿ.

------------------------------------------------------------------------------------------------

-------------------------------------------------------------------------------------------------



 
 
 

Comentarios


bottom of page